ಭೂ ಸುಧಾರಣೆಯ ಬಗ್ಗೆ ಮಾಹಿತಿ Information about land reform Bhu Sudharaneya bagge Mahithi in Kannada
ಭೂ ಸುಧಾರಣೆಯ ಬಗ್ಗೆ ಮಾಹಿತಿ
![Information about land reform in Kannada](https://i0.wp.com/kannadanotes.com/wp-content/uploads/2023/03/ಭೂ-ಸುಧಾರಣೆಯ-ಬಗ್ಗೆ-ಮಾಹಿತಿ.jpg?resize=302%2C200&ssl=1)
ಈ ಲೇಖನಿಯಲ್ಲಿ ಭೂ ಸುಧಾರಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಭೂ ಸುಧಾರಣೆಗಳು :
ಕೃಷಿ ಸಾಗುವಳಿ ವ್ಯವಸ್ಥೆಯಲ್ಲಿನ ಭೂ ಒಡೆತನ, ಗೇಣಿ ಪದ್ದತಿ ಮೊದಲಾದ ಸಾಂಸ್ಥಿಕ ವ್ಯವಸ್ಥೆಯಲ್ಲಿನ ಸುಧಾರಣೆಗಳನ್ನು ಭೂ ಸುಧಾರಣೆ ಎನ್ನುವರು. ಕೃಷಿಯಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮಿಟ್ಟಿನಿಂದ ಕೈಗೊಂಡ ಕ್ರಮಗಳೇ ಭೂ ಸುಧಾರಣಾ ಕ್ರಮಗಳಾಗಿವೆ. ಭಾರತದಲ್ಲಿ ಬ್ರಿಟೀಷರ ಕಾಲದಲ್ಲಿ ಪ್ರಾರಂಭವಾದ ಭೂ ಸಾಗುವಳಿ ಪದ್ದತಿಗಳನ್ನು ರದ್ದುಪಡಿಸಲಾಯಿತು. ಗೇಣಿದಾರರಿಗೆ ಭೂ ಸಾಗುವಳಿಯ ಖಾತರಿ ನೀಡಲಾಯಿತು. ಮಧ್ಯವರ್ಗಗಳನ್ನು ನಿರ್ಮೂಲನೆ ಮಾಡಲಾಯಿತು. ಉಳುವವನನ್ನು ಭೂ ಒಡೆಯನನ್ನಾಗಿ ಮಾಡಲಾಯಿತು. ಉಳುವವನನ್ನು ಭೂ ಒಡೆಯನನ್ನಾಗಿ ಮಾಡಲಾಯಿತು. ಭೂ ಹಿಡುವಳಿಗಳಿಗೆ ಗರಿಷ್ಠ ಮಿತಿ ನೀಡಲಾಯಿತು. ಗೇಣಿಯನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಯಿತು, ಈ ರೀತಿ ಕೈಗೊಂಡ ಎಲ್ಲಾ ಕ್ರಮಗಳನ್ನು ಒಳಗೊಂಡ ಸಾಂಸ್ಥಿಕ ವ್ಯವಸ್ಥೆಯಲ್ಲಿ ತರುವ ಸುಧಾರಣೆಗಳನ್ನು ಭೂ ಸುಧಾರಣೆ ಎನ್ನುವರು.
ಭೂ ಸುಧಾರಣೆಯ ಉದ್ದೇಶಗಳು :
- ಮಧ್ಯವರ್ತಿಗಳ ನಿಷೇಧ
- ಗೇಣಿದಾರರ ಸುಧಾರಣೆ ಮತ್ತು ಭೂ ಒಡೆತನ ಹಕ್ಕು ನೀಡುವುದು.
- ಭೂ ಹಿಡುವಳಿಯ ಮೇಲೆ ನಿರ್ಬಂಧ ಹೇರುವುದು.
- ಭೂ ಹಿಡುವಳಿಗಳನ್ನು ಕ್ರೋಡೀಕರಿಸುವುದು.
- ಸಹಕಾರಿ ವ್ಯವಸ್ಥೆಯನ್ನು ಸಂಘಟಿಸುವುದು.
ಸ್ವಾತಂತ್ರ್ಯ ಪೂರ್ವದಲ್ಲಿ ಸಾಗುವಳಿ ಪದ್ದತಿಗಳು :
ಜಮೀನ್ದಾರಿ ಪದ್ದತಿ :
ಈಸ್ಟ್ ಇಂಡಿಯಾ ಕಂಪನಿಯ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಲಾರ್ಡ್ ಕಾರ್ನವಾಲೀಸನು 1793ರಲ್ಲಿ ಜಾರಿಗೆ ತಂದನು. ಈ ಪದ್ದತಿಯಲ್ಲಿ ಭೂ ಒಡೆಯರಿಗೆ ಅಂದರೆ ಜಮೀನ್ದಾರರಿಗೆ ವಿಶಾಲವಾದ ಪ್ರದೇಶದ ಭೂ ಒಡೆತನವನ್ನು ನೀಡಲಾಯಿತು ಮತ್ತು ಗೇಣಿಯನ್ನು ಸಂಗ್ರಹಿಸುವ ಅಧಿಕಾರ ನೀಡಲಾಯಿತು. ಈ ವ್ಯವಸ್ಥೆಯಲ್ಲಿ ಜಮೀನ್ದಾರರುಸರ್ಕಾರ ಮತ್ತು ಸಾಗುವಳಿದಾರರ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಹಲ್ವಾರಿ ಪದ್ದತಿ :
ಮಹಲ್ವಾರಿ ಪದ್ದತಿಯನ್ನು ಲಾರ್ಡ್ ವಿಲಿಯಂ ಬೆಂಟಿಕ್ ಗೌರ್ನರ್ ಜನರಲ್ ಆಗಿದ್ದಾಗ ಜೇಮ್ಸ್ ಥಾಮ್ಸನ್ ರವರು ಜಾರಿಗೆ ತಂದರು. ಈ ಪದ್ದತಿಯನ್ನು ಪ್ರಾರಂಭದಲ್ಲಿ ಆಗ್ರಾ ಮತ್ತು ಔದ್ ಪ್ರಾಂತ್ಯಗಳಲ್ಲಿ ಜಾರಿಗೆ ತರಲಾಯಿತು. ನಂತರ ಮಧ್ಯಪ್ರದೇಶ ಮತ್ತು ಪಂಜಾಬಗಳಿಗೆ ವಿಸ್ತರಿಸಲಾಯಿತು. ಮಹಲ್ವಾರಿ ಪದ್ದತಿಯಲ್ಲಿ ಒಂದು ಗ್ರಾಮವನ್ನು ಗೇಣಿಪಾವತಿ ಮಾಡುವ ಒಂದು ಘಟಕ ಎಂದು ಪರಿಗಣಿಸಲಾಯಿತು. ಕೃಷಿ ಭೂಮಿಯು ಸಮುದಾಯದ ಒಡೆತನದಲ್ಲಿತ್ತು. ಗ್ರಾಮದ ಸಮುದಾಯದ ಸದಸ್ಯರು ವೈಯಕ್ತಿಕವಾಗಿ ಮತ್ತು ಸಂಯುಕ್ತವಾಗಿ ಸರ್ಕಾರಕ್ಕೆ ಭೂ ಕಂದಾಯವನ್ನು ನೀಡುವ ಜವಬ್ದಾರಿ ಹೊಂದಿದ್ದರು.
ರೈತವಾರಿ ಪದ್ದತಿ :
ರೈತವಾರಿ ಪದ್ದತಿಯನ್ನು ಸರ್ ಥಾಮಸ್ ಮನ್ರೋ ಮತ್ತು ಕ್ಯಾಪ್ಟನ್ ರಿಡ್ ಜಾರಿಗೆ ತಂದರು. ಇದನ್ನು ಪ್ರಾರಂಭದಲ್ಲಿ ತಮಿಳುನಾಡಿಗೆ ನಂತರ ಮಹಾರಾಷ್ಟ್ರ, ಬಿಹಾರ, ಪೂರ್ವ ಪಂಜಾಬ್, ಅಸ್ಸಾಂ ಮತ್ತು ಕೂರ್ಗ್ ಪ್ರಾಂತ್ಯಗಳಿಗೆ ವಿಸ್ತರಿಸಲಾಯಿತು. ಈ ವ್ಯವಸ್ಥೆಯಲ್ಲಿ ರೈತರು ಮತ್ತು ಸರ್ಕಾರದ ನಡುವೆ ಯಾವುದೇ ಮಧ್ಯವರ್ತಿಗಳಿಲ್ಲದೇ ರೈತರು ಸರ್ಕಾರಕ್ಕೆ ನೇರವಾಗಿ ಭೂ ಕಂದಾಯವನ್ನು ಪಾವತಿಸಬೇಕಾಗಿತ್ತು. ರೈತರು ಭೂಮಿಯ ಮಾಲೀಕರಾಗಿದ್ದು ಭೂಮಿಯನ್ನು ಮಾರಾಟ ಮಾಡುವ ವರ್ಗಾವಣೆ ಮಾಡುವ ಮತ್ತು ಗುತ್ತಿಗೆ ನೀಡುವ ಅಧಿಕಾರ ಹೊಂದಿದ್ದರು.
ಪ್ರಮುಖ ಭೂ ಸುಧಾರಣಾ ಕ್ರಮಗಳು :
ಮಧ್ಯಸ್ಥಗಾರರ ನಿರ್ಮೂಲನೆ :
ಭಾರತವು ಸ್ವತಂತ್ರಗೊಂಡ ಸಂದರ್ಭದಲ್ಲಿ ಕೃಷಿ ಭೂಮಿಯ ಮಧ್ಯಸ್ಥ ಹಿಡಿತದಲ್ಲಿದ್ದು, ಭೂಮಿಯ ಮಾಲೀಕ ಒಬ್ಬನಾಗಿದ್ದರೆ, ಅದನ್ನು ಉಳುಮೆ ಮಾಡುವವನು ಮತ್ತೊಬ್ಬನಾಗಿದ್ದ. ಈ ಮಧ್ಯಸ್ಥಗಾರರ ಶೋಷಣೆ ಕೃಷಿ ಉತ್ಪಾದನೆಯನ್ನು ಕಡಿಮೆ ಮಾಡಿತು. ವಾಸ್ತವವಾಗಿ ಉಳುಮೆಮಾಡುವ ರೈತನು ಭೂಮಿಯ ಒಡೆಯನಾಗಿರಲಿಲ್ಲ ಮತ್ತು ಹಿಡುವಳಿಯ ಭದ್ರತೆಯನ್ನು ಹೊಂದಿರಲಿಲ್ಲ. ಆದ್ದರಿಂದ ಕೃಷಿ ಭೂಮಿಯನ್ನು ಅಭಿವೃದ್ದಿಪಡಿಸುವ ಇಚ್ಛೆ ಹೊಂದಿರಲಿಲ್ಲ. ಆದ್ದರಿಂದ ಕೃಷಿಯಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಗಳೆರಡು ಕಡಿಮೆ ಇತ್ತು. ಸ್ವಾತಂತ್ರ್ಯಗೊಂಡ ನಂತರ ಸರ್ಕಾರ ಮಧ್ಯಸ್ಥಗಾರರನ್ನು ನಿರ್ಮೂಲನೆ ಮಾಡುವ ಕ್ರಮಗಳನ್ನು ಕೈಗೊಂಡಿತು. ಆ ಮೂಲಕ ರೈತವಾರಿ ಪದ್ದತಿ, ಜಮೀನ್ದಾರಿ ಪದ್ದತಿ ಮತ್ತು ಮಹಲ್ವಾರಿ ಪದ್ದತಿಗಳು ರದ್ದಾದವು.
ಗೇಣಿ ಪದ್ದತಿಯಲ್ಲಿ ಸುಧಾರಣೆ :
ಭೂ ಮಾಲೀಕರಿಂದ ಸಾಗುವಳಿ ಮಾಡಲು ಭೂಮಿಯನ್ನು ಪಡೆಯುವವರಿಗೆ ಗೇಣಿದಾರರು ಎಂದು ಕರೆಯುತ್ತಾರೆ. ಗೇಣಿದಾರರಲ್ಲಿ ವಿಧಗಳನ್ನು ನೋಡಬಹುದು. ಅವರುಗಳೆಂದರೆ, ಶಾಶ್ವತ ಹಕ್ಕಿನ ಗೇಣಿದಾರರು, ತಾತ್ಕಾಲಿಕ ಹಕ್ಕಿನ ಗೇಣಿದಾರರು ಮತ್ತು ಉಪ ಗೇಣಿದಾರರು ಮತ್ತು ಉಪ ಗೇಣಿದಾರರು ಇಲ್ಲಿ ಶಾಶ್ವತ ಹಕ್ಕಿನ ಗೇಣಿದಾರರು ಮಾತ್ರ ಉಳುಮೆ ಮಾಡುವ ಭೂಮಿಯ ಮೇಲೆ ಹಕ್ಕನ್ನು ಹೊಂದಿರುತ್ತಾರೆ.ಆದರೆ ಉಳಿದ ವರ್ಗದವರು ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಭೂ ಮಾಲೀಕರು ಅಧಿಕ ದೆದ ಗೇಣಿಯನ್ನು ವಸೂಲಿ ಮಾಡುವ ಮೂಲಕ ಗೇಣಿದಾರರನ್ನು ಶೋಷಿಸುತ್ತಿದ್ದರು. ಗೇಣಿದಾರರನ್ನು ಭೂ ಮಾಲಿಕ ಶೋಷಣೆಯಿಂದ ತಪ್ಪಿಸಲು ಗೇಣಿ ಪದ್ದತಿಯಲ್ಲಿ ಸುಧಾರಣೆ ತರಲಾಯಿತು. ಅವುಗಳೆಂದರೆ
- ಗೇಣಿಯನ್ನು ನಿರ್ಧರಿಸುವುದು
- ಹಿಡುವಳಿ ಭದ್ರತೆ ನೀಡುವುದು
- ಭೂ ಒಡೆತನದ ಹಕ್ಕು
ಕೃಷಿ ಭೂಮಿಯ ಮೇಲೆ ಗರಿಷ್ಠ ಮಿತಿ ವಿಧಿಸುವುದು :
ವ್ಯಕ್ತಿಗಳು ಹೊಂದಿರಬಹುದಾದ ಭೂಮಿಯ ಮೇಲಿನ ಕಾನೂನಾತ್ಮಕ ಮಿತಿಯನ್ನು ಕೃಷಿ ಭೂಮಿಯ ಮೇಲಿನ ಗರಿಷ್ಠ ಮಿತಿ ಎನ್ನುವರು. ಈ ಮಿತಿಯನ್ನು ಮುಂದೆ ಹೊಂದಿರಬಹುದಾದ ಭೂಮಿಯ ಮೇಲೆ ಮತ್ತು ಪ್ರಸ್ತುತ ಅಸ್ತಿತ್ವದಲ್ಲಿರುವ ಭೂಮಿಯ ಮೇಲೆ ವಿಧಿಸಲಾಯಿತು. ಮೊದಲನೇ ಪಂಚವಾರ್ಷಿಕ ಯೋಜನೆಯು ಭೂ ಹಿಡುವಳಿಯ ಮೇಲೆ ಗರಿಷ್ಠ ಮಿತಿಯನ್ನು ಕುಟುಂಬದ ಆಧಾರದ ಮೇಲೆ ವಿಧಿಸಿತು. ಎರಡನೇ ಪಂಚವಾಷಿಕ ಯೋಜನೆಯಲ್ಲೂ ಇದು ಮುಂದುವರೆಯಿತು. ಆದರೆ ಎಲ್ಲಾ ರಾಜ್ಯಗಳಲ್ಲಿ ಏಕರೂಪತೆ ಇರಲಿಲ್ಲ. ಆದ್ದರಿಂದ 1972ರಲ್ಲಿ ಎಲ್ಲಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಭೂಮಿತಿಯ ಹೊಸ ಕಾನೂನನ್ನು ರೂಪಿಸಲಾಯಿತು. ಇದರ ಆಧಾರದ ಮೇಲೆ ನೀರಾವರಿ ಭೂಮಿಗೆ 10 ರಿಂದ 18 ಎಕರೆ, ಅರೆ ನೀರಾವರಿ ಭೂಮಿಗೆ 27 ಎಕರೆ ಮತ್ತು ಒಣ ಭೂಮಿಗೆ 54 ಎಕರೆ ಎಂದು ಗರಿಷ್ಠ ಮಿತಿ ಹೇರಲಾಯಿತು. ಹೆಚ್ಚುವರಿ ಭೂಮಿಯನ್ನು ತನ್ನು ವಶಕ್ಕೆ ಪಡೆಯಲಾಯಿತು.
ಭೂ ಹಿಡುವಳಿಗಳ ಘನೀಕರಣ :
ಸಣ್ಣ ಸಣ್ಣ ಹಿಡುವಳಿಗಳಾಗಿ ಛಿದ್ರಗೊಂಡ ಭೂಮಿಯನ್ನು ಒಗ್ಗೂಡಿಸುವುದನ್ನು ಭೂಹಿಡುವಳಿಗಳ ಘನೀಕರಣ ಎನ್ನುತ್ತೇವೆ. ಭಾರತದಲ್ಲಿ ಉತ್ತರಾಧಿಕಾರದ ಕಾನೂನು ಜನಸಂಖ್ಯೆಯ ಹೆಚ್ಚಳ, ಅವಿಭಕ್ತ ಕುಟುಂಬದಲ್ಲಿ ಒಡಕು ಗೇಣಿ ಪದ್ದತಿ ಮೊದಲಾದ ಕಾರಣದಿಂದ ಭೂಮಿಯು ಛಿದ್ರಗೊಂಡಿದೆ. ಸಣ್ಣ ಹಿಡುವಳಿಗಳನ್ನು ಕ್ರೂಡೀಕರಿಸಿ ದೊಡ್ಡ ಹಿಡುವಳಿಗಳನ್ನಾಗಿ ಮಾಡಲಾಗುತ್ತದೆ. ಆದರೆ ಈ ಕ್ರಮ ಕೆಲವು ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತಂದರು ಯಶಸ್ವಿಯಾಗಲಿಲ್ಲ.
ಆರ್ಥಿಕ ಹಿಡುವಳಿಗಳ ನಿರ್ಮಾಣ :
ಪ್ರತಿಯೊಬ್ಬ ರೈತನು ತನ್ನ ಕುಟುಂಬವನ್ನು ಉನ್ನತ ಜೀವನ ಮಟ್ಟದಲ್ಲಿ ಘೋಷಿಸಲು ಸಾಕಾಗುವಷ್ಟು ಆದಾಯವನ್ನು ತರುವ ಕನಿಷ್ಠ ಪ್ರಮಾಣದ ಭೂ ಹಿಡುವಳಿಯನ್ನು ಆರ್ಥಿಕ ಹಿಡುವಳಿಗಳು ಎನ್ನುವರು. ಆರ್ಥಿಕ ಹಿಡುವಳಿಗಳನ್ನು ರೂಪಿಸಲು ಹಲವಾರು ರಾಜ್ಯಗಳ ಹಲವಾರು ಕ್ರಮಗಳನ್ನು ಕೈಗೊಂಡರು. ಅವುಗಳು ಯಾವುದೇ ಯಶಸ್ಸು ಸಾಧಿಸಲಿಲ್ಲ.
FAQ :
ಭೂ ಸುಧಾರಣೆಯ ಉದ್ದೇಶಗಳಾವುವು?
ಮಧ್ಯವರ್ತಿಗಳ ನಿಷೇಧ
ಗೇಣಿದಾರರ ಸುಧಾರಣೆ ಮತ್ತು ಭೂ ಒಡೆತನ ಹಕ್ಕು ನೀಡುವುದು.
ಭೂ ಹಿಡುವಳಿಯ ಮೇಲೆ ನಿರ್ಬಂಧ ಹೇರುವುದು.
ಭೂ ಹಿಡುವಳಿಗಳನ್ನು ಕ್ರೋಡೀಕರಿಸುವುದು.
ಸಹಕಾರಿ ವ್ಯವಸ್ಥೆಯನ್ನು ಸಂಘಟಿಸುವುದು
ಭೂ ಸುಧಾರಣೆ ಎಂದರೇನು?
ಕೃಷಿ ಸಾಗುವಳಿ ವ್ಯವಸ್ಥೆಯಲ್ಲಿನ ಭೂ ಒಡೆತನ, ಗೇಣಿ ಪದ್ದತಿ ಮೊದಲಾದ ಸಾಂಸ್ಥಿಕ ವ್ಯವಸ್ಥೆಯಲ್ಲಿನ ಸುಧಾರಣೆಗಳನ್ನು ಭೂ ಸುಧಾರಣೆ ಎನ್ನುವರು
ಇತರೆ ವಿಷಯಗಳು :
ಭಾರತದ ಪ್ರಮುಖ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ